ಸ್ವಚ್ಛ ಶನಿವಾರ ಕಾರ್ಯಕ್ರಮದಡಿ ಪುರಾತನ ಕಲ್ಯಾಣಿಗೆ ಕಾಯಕಲ್ಪ ಆವತಿ ಗ್ರಾಪಂ ವತಿಯಿಂದ ಸ್ವಚ್ಛತಾ ಕಾರ್ಯ | ಹೂಳೆತ್ತುವುದರ ಮೂಲಕ ಕಲ್ಯಾಣಿ ಅಭಿವೃದ್ಧಿ
ವರದಿ: ಹೈದರ್ ಸಾಬ್hai.dhl562110@gmail.comದೇವನಹಳ್ಳಿ: ಮೇಲಾಧಿಕಾರಿಗಳ ಆದೇಶದಂತೆ ಸ್ವಚ್ಛತಾ ಶ್ರಮದಾನ ಮಾಡುವುದರ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ಎಂಡಿ ಇಸಾಕ್ ನೇತೃತ್ವದಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮದಡಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.ದೇವನಹಳ್ಳಿ ತಾಲೂಕಿನ ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರದೇನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಕಲ್ಯಾಣಿಯಲ್ಲಿ ಗಿಡಗಂಟೆಗಳು ಮತ್ತು ಜೊಂಡು ಗಿಡಗಳು ಯತೇಚ್ಛವಾಗಿದ್ದ ಹಿನ್ನಲೆಯಲ್ಲಿ ಕಲ್ಯಾಣಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮದಡಿಯಲ್ಲಿ ಬೆಳಗಿನಿಂದಲೇ ಸ್ವಚ್ಚತಾಗಾರರು, ನೀರುಗಂಟಿಗಳು ಸ್ವಚ್ಛತೆ ಮಾಡುವುದರ ಮೂಲಕ ಪರಿಸರ ಕಾಳಜಿ ತೋರಿಸಿದ್ದು ಗಮನಸೆಳೆಯಿತು.ಆವತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ಎಂಡಿ ಇಸಾಕ್ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಮೇಲಾಧಿಕಾರಿಗಳ ನಿರ್ದೇಶನದಂತೆ ಪ್ರತಿ ತಿಂಗಳು ನಾಲ್ಕನೇ ಶನಿವಾರ ನಮ್ಮ ಗ್ರಾಮ, ಸ್ವಚ್ಛತೆ ಕಾಪಾಡುವ ಕುರಿತು ಪುರಾತನ ಕಲ್ಯಾಣಿ ಸ್ವಚ್ಛತಾ ಕಾಮಗಾರಿ ಮಾಡಲಾಗಿದೆ. ಹೂಳೆತ್ತುವ ಕಾಮಗಾರಿ ಮಾಡಲಾಗಿದೆ. ಎಲ್ಲಾ ಸಿಬ್ಬಂದಿಗಳಿಂದ ಸ್ವಚ್ಛತೆಯನ್ನು ಕಾಪಾಡಲಾಗಿದೆ. ಪ್ಲಾಸ್ಟಿಕ್ನಂತಹ ವಸ್ತುಗಳನ್ನು ಸಹ ಬೇರ್ಪಡಿಸಲಾಗಿದೆ. ಕಲ್ಯಾಣಿಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಬೇಸಿಗೆಗೆ ರೈತರ ಜಾನುವಾರುಗಳಿಗೆ ಉಪಯೋಗವಾಗಲಿದೆ ಎಂದು ಭಾವಿಸುತ್ತೇನೆ ಎಂದು ಮಾಹಿತಿ ನೀಡಿದರು.ಈ ವೇಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ರಾಘವೇಂದ್ರ, ಗ್ರಾಮ ಪಂಚಾಯಿತಿ ಸ್ವಚ್ಚತಾ ನೌಕರರು, ಸಿಬ್ಬಂದಿಗಳು ಇದ್ದರು.