ಪರಿಸರ ಸಂರಕ್ಷಣೆ: ಜಮಾ ಅತೆ ಇಸ್ಲಾಮಿ ಹಿಂದ್ನಿಂದ ವಿವಿಧ ಚಟುವಟಿಕೆ
ಬೀದರ್: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆಯು ನಗರದಲ್ಲಿ ಉತ್ತಮ ಪರಿಸರ ಉತ್ತಮ ಭವಿಷ್ಯ ಘೋಷವಾಕ್ಯದಡಿ ಪರಿಸರ ಸಂರಕ್ಷಣೆಗೆ ಪೂರಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಶುಕ್ರವಾರ (ಜೂ. 5) ನಗರದ ಮಸೀದಿಗಳಲ್ಲಿ ಧರ್ಮ ಗುರುಗಳು ಪರಿಸರ ಸಂರಕ್ಷಣೆ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಅಂದು ಪರಿಸರ ಸಂರಕ್ಷಣೆ ಮತ್ತು ಇಸ್ಲಾಮಿನ ಬೋಧನೆಗಳು ಕೃತಿ ಬಿಡುಗಡೆಯೂ ಆಗಲಿದೆ ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆಯ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಮೌಜ್ಜಮ್ ತಿಳಿಸಿದ್ದಾರೆ.
ಜೂ. 7 ರಂದು ಇಬ್ರಾಹೀಮ್ ಮಸೀದಿಯಲ್ಲಿ ಪರಿಸರ ಸಂರಕ್ಷಣೆಗೆ ಅನುಸರಿಸಬೇಕಾದ ಮಾರ್ಗಗಳ ಕುರಿತು ಸಭೆ ನಡೆಸಲಾಗುವುದು. ಪ್ರತಿ ಓಣಿಗಳಲ್ಲಿ ಸಹ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಕನ್ನಡ, ಉರ್ದು ಭಾಷೆಯಲ್ಲಿ ಮುದ್ರಿಸಲಾದ ಕರಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗುವ ಕಸ ತೆರವುಗೊಳಿಸಲಾಗುವುದು. ಬಳಿಕ ಆ ಸ್ಥಳದಲ್ಲಿ ಕಸ ಚೆಲ್ಲಿದರೆ ದಂಡ ವಿಧಿಸುವ ಫಲಕ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ನಗರದ ಹಸಿರೀಕರಣ ಭಾಗವಾಗಿ ಬೀದರ್ ಕೋಟೆಯಿಂದ ಫತೇ ದರ್ವಾಜಾ ಹಾಗೂ ಚೌಬಾರಾದಿಂದ ನಯಾ ಕಮಾನ್ ವರೆಗೆ ರಸ್ತೆ ಬದಿಯಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಗುವುದು ಎಂದು ತಿಳಿಸಿದ್ದಾರೆ.
ಸಂಘಟನೆಯ ಮಹಿಳಾ ವಿಭಾಗದಿಂದಲೂ ವಿವಿಧ ಪರಿಸರ ಸಂರಕ್ಷಣೆ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಪರಿಸರ ಚೆನ್ನಾಗಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಹೀಗಾಗಿ ಜಲ, ವಾಯು, ಮಣ್ಣು, ಶಬ್ದ ಮಾಲಿನ್ಯವನ್ನು ತಡೆಗಟ್ಟಬೇಕಿದೆ. ಪರಿಸರ ಸಂರಕ್ಷಣೆ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಹೇಳಿದ್ದಾರೆ.
ಬೀದರ್ ನಗರವನ್ನು ಸ್ವಚ್ಛ, ಸುಂದರ ಹಾಗೂ ಹಸಿರಾಗಿಸುವ ಚಟುವಟಿಕೆಗಳಿಗೆ ಸಾರ್ವಜನಿಕರು, ಸಂಘ- ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪಾಲಿಕೆ ಅಧಿಕಾರಿಗಳ ಭೇಟಿ: ಪರಿಸರ ಸಂರಕ್ಷಣೆ ಚಟುವಟಿಕೆ ಹಿನ್ನೆಲೆಯಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಪ್ರಮುಖರು ನಗರದಲ್ಲಿ ಗುರುವಾರ ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.