ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ. ಬೇಂದ್ರೆ
ಕೋಲಾರ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ) 31 ಜನವರಿ 1896ರಂದು ಧಾರವಾಡದ ಪೋತನಿಸ ಓಣಿಯ ಗುಣಾರಿಯವರ ಮನೆಯಲ್ಲಿ ಜನಿಸಿದರು. ಅವರು ಪುಣೆಯಲ್ಲಿ ಎಂ.ಎ ಪದವಿ ಪಡೆದ ನಂತರ ಧಾರವಾಡ ವಿಕ್ಟೋರಿಯಾ ಶಾಲೆಯಲ್ಲಿ ಶಿಕ್ಷಕರಾಗಿ, ಗದಗಿನ ವಿದ್ಯಾದಾನ ಸಮಿತಿ ಶಾಲೆಯ ಹೆಡ್ ಮಾಸ್ಟರ್ ಆಗಿ, ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
1916ರಿಂದ ಕವನಗಳ ರಚನೆ ಆರಂಭಿಸಿ 1919ರಲ್ಲಿ ಲಕ್ಷ್ಮೀಬಾಯಿ ಜೋಗಳೇಕರರೊಂದಿಗೆ ವಿವಾಹವಾದ ದ.ರಾ. ಬೇಂದ್ರೆ, 1930ರಲ್ಲಿ ಮೈಸೂರು ಲೇಖಕರ ಘೋಷ್ಠಿಗೆ ಅಧ್ಯಕ್ಷತೆ ವಹಿಸಿದರು. 1935ರಿಂದ 1943ರವರೆ 'ಜೀವನ' ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅವರು 27ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ 'ಇಳಿದು ಬಾ ತಾಯಿ ಇಳಿದು ಬಾ' ಹಾಡನ್ನು ರಚಿಸಿದರು. 1959ರಲ್ಲಿ ಅವರ 'ಅರಳು-ಮರಳು' ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು.
1966ರಿಂದ 1968ರವರೆ ಅವರಿಗೆ ಪದ್ಮಶ್ರೀ, ಸಾಹಿತ್ಯ ಆಚಾರ್ಯ, ಮೈಸೂರು ಮತ್ತು ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದರು ಮತ್ತು ಫೆಲೋ ಸಾಹಿತ್ಯ ಅಕಾಡೆಮಿ ಗೌರವ ದೊರಕಿತು. 1974ರಲ್ಲಿ 'ನಾಕುತಂತಿ' ಕವನ ಸಂಕಲನಕ್ಕೆ "ಜ್ಞಾನಪೀಠ ಪ್ರಶಸ್ತಿ" ಸಿಕ್ಕಿತು. ಬೇಂದ್ರೆಯವರು 1981ರ ಅಕ್ಟೋಬರ್ 26ರಂದು ಮುಂಬೈನಲ್ಲಿ ವಿಧಿವಶರಾದರು.