ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆ ಈಡೇರಿಸಲು ಮನವಿ
ಬೀದರ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ಸಿ.ಐ.ಟಿ.ಯು. ಸಂಯೋಜಿತ) ಜಿಲ್ಲಾ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರರು, ವಾಟರ್ಮೆನ್, ಸಿಪಾಯಿ ಹಾಗೂ ಸ್ವಚ್ಛತಾಗಾರರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ, ಸೇವಾ ಜೇಷ್ಠತೆಯಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಸಂಘದ ಮುಖಂಡರು ಆರೋಪಿಸಿದ್ದಾರೆ. ಹಿರಿಯ ಸಿಬ್ಬಂದಿಯನ್ನು ಕಡೆಗಣಿಸಿ, ಹೊಸದಾಗಿ ಬಂದವರಿಗೆ ಜೇಷ್ಠತಾ ಪಟ್ಟಿಯಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.ಮನವಿಯಲ್ಲಿ 2025-26ನೇ ಸಾಲಿನ ಕರವಸೂಲಿಗಾರರ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ತಿದ್ದುಪಡಿ ಮಾಡುವುದು, ಜೇಷ್ಠತಾ ಪಟ್ಟಿ ಸರಿಪಡಿಸುವವರೆಗೆ ಮುಂಬಡ್ತಿ ಹಾಗೂ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವುದು, ಅನುಮೋದನೆ ಬಾಕಿ ಉಳಿದ ಸಿಬ್ಬಂದಿಗೆ ಅನುಮೋದನೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.ಇದೇ ವೇಳೆ 10ನೇ ತರಗತಿ ಪಾಸಾದ ವಾಟರ್ಮೆನ್ ಸಿಬ್ಬಂದಿಗೆ ಕರವಸೂಲಿಗಾರರು ಹಾಗೂ ಡಿ.ಇ.ಓ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕು, ಸ್ವಚ್ಛ ವಾಹಿನಿ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿಸಬೇಕು, ಮರಣ ಹೊಂದಿದ ಅಥವಾ ನಿವೃತ್ತಿ ಪಡೆದ ಸಿಬ್ಬಂದಿಗಳ ಕುಟುಂಬ ಸದಸ್ಯರಿಗೆ ಅನುಕಂಪ ಆಧಾರಿತ ನೇಮಕಾತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.ನಿವೃತ್ತಿ ಹೊಂದಿದ ಸಿಬ್ಬಂದಿಗೆ ಉಪದಾನ ವ್ಯವಸ್ಥೆ ಕಲ್ಪಿಸುವಂತೆ ಸಹ ಮನವಿಯಲ್ಲಿ ಆಗ್ರಹಿಸಲಾಗಿದೆ.ಸಮಸ್ಯೆಗಳನ್ನು ಶೀಘ್ರ ಬಗೆಹರಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯಧ್ಯಕ್ಷರಾದ ಎಂ.ಬಿ ನಾಡಗೌಡ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜೀವನ ಕನ್ನಳ್ಳೆ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಿಪ್ಪಳಗಾಂವ, ಪ್ರಭು ಸಂತೋಷಕರ್, ಶ್ರೀದೇವಿ ಚೌಡೆ, ಧನರಾಜ ಗುಳೆ, ವಿಜಯಕುಮಾರ ಜನವಾಡಾ, ಹಾಗೂ ನರಸಿಂಗ ಹಳೆಯೆಂಬರ್ ಉಪಸ್ಥಿತರಿದ್ದರು.