ಡಾ. ಅನಂತಕೃಷ್ಣ ಜಿ.ಎಸ್ ರವರಿಗೆ ವೇದ ವಿಭೂಷಣ ಪ್ರಶಸ್ತಿ
ಗಂಜಿಗುಂಟೆ: ಶ್ರೀಮತಿ. ರಮಾದೇವಿ ಜಿ.ಎಸ್ ಮತ್ತು ಶ್ರೀ.ಶ್ರೀನಿವಾಸಮೂರ್ತಿ ಜಿ.ಆರ್ ಅವರ ಪುತ್ರ ಡಾ. ಅನಂತಕೃಷ್ಣ ಜಿ.ಎಸ್ ರವರು ಗಂಜಿಗುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ನಂತರ ಗುಬ್ಬಿಯ ಚಿದಂಬರಾಶ್ರಮದಲ್ಲಿ ವೇದ, ಸಂಸ್ಕೃತ, ಯೋಗ ಮತ್ತು ಲೌಕಿಕ ವಿದ್ಯಾಭ್ಯಾಸಗಳನ್ನು ಮುಗಿಸಿದ್ದಾರೆ. ತುಮಕೂರಿನ ಬಿ.ಎಸ್.ಎಸ್.ಟಿ ವಿದ್ಯಾರ್ಥಿನಿಲಯದಲ್ಲಿ ಪಿ.ಯು.ಸಿ, ಬಿ.ಎಸ್.ಸಿ, ಮತ್ತು ಬಿ.ಎಡ್ ಪದವಿಗಳನ್ನು ಪಡೆದಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಅಲಂಕಾರ ಶಾಸ್ತ್ರದಲ್ಲಿ ಎಂ.ಎ ಹಾಗೂ ಜ್ಯೋತಿಷ್ಯದಲ್ಲಿ ಬಿ.ಎ ಪದವಿಗಳನ್ನು ಪಡೆದಿದ್ದಾರೆ.
ಡಾ. ಅನಂತಕೃಷ್ಣವು ಪ್ರತಿಷ್ಠಿತ ಸಂಸ್ಕೃತ ಪಾಠಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಸಂಸ್ಕೃತ, ವೇದ, ಯೋಗ ಮತ್ತು ಗಣಕಯಂತ್ರ ತರಬೇತಿಗಳನ್ನು ನೀಡುತ್ತಿದ್ದಾರೆ. ಅವರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಇವರ ಸಾಧನೆಗೆ ಕೆ.ಆರ್.ಎಸ್ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ ಮಿಷನ್ ವೇದ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಸೌತ್ ಆಫ್ರಿಕಾದ ಮಲವಾಯ್ ಸಿ.ಸಿ.ಯು ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ . ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮಿಜಿ ಮತ್ತು ಆಂಧ್ರಪ್ರದೇಶದ ಆದೋನಿ ಶಂಕರಾಚಾರ್ಯ ದತ್ತಾತ್ರೇಯ ಪೀಠದ ಪೀಠಾಧಿಪತಿ ಡಾ. ವಿದ್ಯಾಭಿನವ ಸುಬ್ರಮಣ್ಯ ಭಾರತಿ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವಾದಿಸಿದ್ದಾರೆ.