ಮಾ. ಸ. ಬ ಕಾಲೇಜ್ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮದ ಉದ್ಘಾಟನೆ ಯಶಸ್ವಿ
ಮಾ. ಸ. ಬ ಕಾಲೇಜ್ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮದ ಉದ್ಘಾಟನೆ ಯಶಸ್ವಿ
ಬನ್ನಿಕೋಡು, ಮೇ 15:
ಮಾ. ಸ. ಬ. ಕಾಲೇಜು ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು 15-05-2026 ರಂದು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಹಿರಿಯ ಗ್ರಾಮಸ್ಥರಾದ ರೇವಣಸಿದ್ಧಪ್ಪ ಅವರು ಮಾತನಾಡಿ, ತಮ್ಮ ಗ್ರಾಮವನ್ನು ಶಿಬಿರಕ್ಕಾಗಿ ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಗ್ರಾಮಾಭಿವೃದ್ಧಿಗೆ ಕೈಜೋಡಿಸಿ, ಗ್ರಾಮದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂದು ಕರೆ ನೀಡಿದರು.
ಗ್ರಾಮದ ಮುಖಂಡರಾದ ಬಸವರಾಜ್ ಎಚ್.ಎಚ್. ಅವರು ವಿದ್ಯಾರ್ಥಿಗಳು ಶಿಸ್ತು ಪಾಲನೆ ಮಾಡಬೇಕು ಹಾಗೂ ಗ್ರಾಮಸ್ಥರೊಂದಿಗೆ ಸೌಹಾರ್ದದಿಂದ ನಡೆದುಕೊಳ್ಳಬೇಕು ಎಂದು ಹಾರೈಸಿದರು. ನಂತರ ಉಪನ್ಯಾಸಕಿ ಡಾ. ಕಾವ್ಯಶ್ರೀ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುವುದು ಎನ್.ಎಸ್.ಎಸ್. ಶಿಬಿರದ ಮುಖ್ಯ ಉದ್ದೇಶವಾಗಿದ್ದು, ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆಯಾದ ಪ್ರೊ. ಅನಿತಾ ಕುಮಾರಿ ಜೆ. ಅವರು ಮಾತನಾಡಿ, ಗ್ರಾಮಸ್ಥರ ಸಹಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಎನ್.ಎಸ್.ಎಸ್. ಧ್ಯೇಯ, ನಾಯಕತ್ವ, ಗುಂಪು ನಿರ್ವಹಣೆ, ಶಿಸ್ತು, ಪರಿವರ್ತನೆ ಹಾಗೂ ದೊರಕಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಕೌಶಲ್ಯವನ್ನು ಹೊರತರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಂಗಣ್ಣ ಹಾಗೂ ರಾಮನಗೌಡ, ನಟರಾಜ್, ಕೆ.ಬೇವಿನಹಳ್ಳಿಯ ಉಪನ್ಯಾಸಕರಾದ ವಿಶ್ವನಾಥ ಡಿ. ಆರ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಾಧಿಕಾರಿಗಳಾದ ಡಾ. ರಾಘವೇಂದ್ರ ಅವರು ಸ್ವಾಗತಿಸಿದರು. ಪ್ರಾರ್ಥನೆಯನ್ನು ಕೀರ್ತನ ಸಂಗಡಿಗರು ಹಾಡಿದರು. ಉಪನ್ಯಾಸಕರಾದ ಪರಮೇಶ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಕಾರ್ಯಕ್ರಮಾಧಿಕಾರಿಗಳಾದ ಡಾ. ಪ್ರವೀಣ್ ಕುಮಾರ್ ಅವರು ನೆರವೇರಿಸಿದರು.