ಔರಾದ್: ಎಸ್ಐಆರ್ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ
ಔರಾದ್: ಎಸ್ಐಆರ್ ಹಾಗೂ ಇವಿಎಂ ರದ್ದುಪಡಿಸುವ ಕುರಿತು ಸಾಮಾಜಿಕ ಕಾರ್ಯಕರ್ತ ಗೋಪಾಲ್ ಸಿಂಗ್ ಠಾಕೂರ್ ಕೈಗೊಂಡ ಏಕಾಂಗಿ ಉಪವಾಸ ಸತ್ಯಾಗ್ರಹಕ್ಕೆ ಬೀದರ್ ಜಿಲ್ಲಾ ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸದಸ್ಯರು ಬುಧವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಸಮಿತಿಯ ಪ್ರಮುಖರು ಪ್ರಜಾಪ್ರಭುತ್ವ ಮತ್ತು ಮತದಾರರ ಹಕ್ಕುಗಳ ರಕ್ಷಣೆಯನ್ನು ಒತ್ತಿಹೇಳಿ, ಎಸ್ಐಆರ್ ಹಾಗೂ ಇವಿಎಂ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಔರಾದ್ನಲ್ಲಿ ಶೀಘ್ರದಲ್ಲೇ ಸಮಾವೇಶ ಆಯೋಜಿಸುವುದಾಗಿ ತಿಳಿಸಿದರು. ಸತ್ಯಾಗ್ರಹ ನಡೆಸುತ್ತಿರುವ ಗೋಪಾಲ್ ಸಿಂಗ್ ಠಾಕೂರ್ ಅವರು, ಎಸ್ಐಆರ್ ಮತದಾರರ ಹಕ್ಕನ್ನು ಕಸಿದುಕೊಳ್ಳುತ್ತಿರುವ ಸಂವಿಧಾನ ವಿರೋಧಿ ಪ್ರಕ್ರಿಯೆಯಾಗಿದ್ದು, ಇದರಿಂದ ಲಕ್ಷಾಂತರ ಮತದಾರರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಗೋಪಾಲ್ ಸಿಂಗ್ ಠಾಕೂರ್ ಉಪವಾಸ ಸತ್ಯಾಗ್ರಹದ 11ನೇ ದಿನವನ್ನು ಪೂರ್ಣಗೊಳಿಸಿದ್ದು, ಮುಂದಿನ 21 ದಿನಗಳವರೆಗೆ ಈ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಸಮಿತಿಯ ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಓಂಪ್ರಕಾಶ್ ರೊಟ್ಟೆ, ನಿಜಾಮೊದ್ದೀನ್, ಡಾ. ಮಕ್ಸೂದ್ ಚಂದಾ, ಬಂಟಿ ದರ್ಬಾರೆ, ರಾಹುಲ್ ಖಂದಾರೆ, ಡಾ. ಫಯಾಜ್, ಸಂತೋಷ್ ಸೂರ್ಯವಂಶಿ, ಸಂತೋಷ ಸಿಂಧೆ, ದಿನೇಶ್, ಅಮೀರೋದ್ದೀನ್ ಮತ್ತು ಇತರೆ ಅನೇಕರು ಈ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಗ್ರಹಕ್ಕೆ ಐಕ್ಯತೆ ಸೂಚಿಸಿದರು.