ಸರ್ಕಾರ ಮಾಡದ ಕೆಲಸ ಸ್ವಂತ ಖರ್ಚಿನಲ್ಲಿ ಮಾಡಿದ ರಾಜುಗೌಡ ; ಕಂದಹಳ್ಳಿ ಸೇತುವೆ ರಸ್ತೆ ದುರಸ್ತಿ
ಯಾದಗಿರಿ : ಕಳೆದ ಕೆಲವು ತಿಂಗಳುಗಳ ಹಿಂದೆ ಭೀಮಾ ನದಿಗೆ ಬಂದ ಭೀಕರ ಪ್ರವಾಹದಿಂದಾಗಿ ತಾಲೂಕಿನ ಕಂದಹಳ್ಳಿ ಗ್ರಾಮದ ಬಳಿಯಿರುವ ಸೇತುವೆಯ ಎರಡೂ ಬದಿಯ ಸಂಪರ್ಕ ರಸ್ತೆಗಳು ಕೊಚ್ಚಿ ಹೋಗಿದ್ದವು. ಇದರಿಂದಾಗಿ ಸುತ್ತಮುತ್ತಲಿನ ಹಲವು ಹಳ್ಳಿಗಳ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡು, ಗ್ರಾಮಸ್ಥರು ಮತ್ತು ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿತ್ತು. ಈ ಗಂಭೀರ ಸಮಸ್ಯೆಯ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ನಿರ್ಲಕ್ಷ್ಯದಿಂದಾಗಿ ರಸ್ತೆ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿತ್ತು. ಜನಸಾಮಾನ್ಯರ ಸಂಕಷ್ಟವನ್ನು ಕಣ್ಣಾರೆ ಕಂಡ ಗ್ರಾಮದ ಪ್ರಮುಖರಾದ ರಾಜು ಗೌಡ ಪೊಲೀಸ್ ಪಾಟೀಲ್ ಅವರು, ಸರ್ಕಾರದ ಅನುದಾನಕ್ಕೆ ಕಾಯದೆ ತಾವೇ ಮುಂದಾಗಿ ಮಾದರಿ ಕೆಲಸ ಮಾಡಿದ್ದಾರೆ. ಗ್ರಾಮಸ್ಥರ ಹಿತದೃಷ್ಟಿಯಿಂದ ರಾಜು ಗೌಡರು ತಮ್ಮ ಲಕ್ಷಾಂತರ ರೂಪಾಯಿ ಸ್ವಂತ ಹಣವನ್ನು ವ್ಯಯಿಸಿ, ಯಂತ್ರೋಪಕರಣಗಳ ಮೂಲಕ ಮಣ್ಣು ಮತ್ತು ಕಲ್ಲುಗಳನ್ನು ಹಾಕಿಸಿ ತಾತ್ಕಾಲಿಕವಾಗಿ ಮೊರಂ ರಸ್ತೆ ನಿರ್ಮಿಸಿದ್ದಾರೆ. ಇವರ ಈ ಸಮಯೋಚಿತ ನಿರ್ಧಾರದಿಂದಾಗಿ ಕಡಿತಗೊಂಡಿದ್ದ ಹಳ್ಳಿಗಳ ಸಂಪರ್ಕ ಈಗ ಪುನಃ ಆರಂಭವಾಗಿದ್ದು, ಸಾವಿರಾರು ಜನರಿಗೆ ಅನುಕೂಲವಾಗಿದೆ. ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಜವಾಬ್ದಾರಿಯಿಂದ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿರುವ ಈ ಕಾಲದಲ್ಲಿ, ರಾಜು ಗೌಡ ಪೊಲೀಸ್ ಪಾಟೀಲ್ ಅವರ ಈ ನಿಸ್ವಾರ್ಥ ಸೇವೆ ಇತರರಿಗೆ ನಿಜಕ್ಕೂ ಮಾದರಿಯಾಗಿದೆ ಎಂದು ಕಂದಹಳ್ಳಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮಾನವೀಯ ಕಾರ್ಯದ ಮೂಲಕ ರಾಜುಗೌಡರು ಜನಪರ ಕಾಳಜಿಯನ್ನು ಎತ್ತಿ ಹಿಡಿದಿದ್ದಾರೆ.