ಭೋವಿ ಸಮಾಜದ ಐತಿಹಾಸಿಕ ಶಕ್ತಿಪೀಠ ಶ್ರೀ ಬಾಲ ಬಂಗಾರಮ್ಮ ದೇವಸ್ಥಾನ
ಕಲಬುರಗಿಯ ಹೃದಯ ಭಾಗದಲ್ಲಿರುವ ಮಾರುಕಟ್ಟೆ ಪ್ರದೇಶದ ಸರಾಫ್ ಬಜಾರ್ನಲ್ಲಿರುವಮುನ್ನೂರುವರ್ಷಗಳಗಿಂತಲೂ ಹಳೆಯ ಪಲ್ಲಕ್ಕಿ ಭೋವಿ ಸಮಾಜದ ಏಕೈಕ ದೇವಸ್ಥಾನ ಶ್ರೀ ಬಾಲ ಬಂಗಾರಮ್ಮ ದೇವಿಯ ದೇವಸ್ಥಾನದ ಬುಟ್ಟಿ ಜಾತ್ರೆ ಮಾರ್ಚ್ 27ರಂದು ಜರಗಲಿದೆ ಎಂದು ಭೋವಿ ಸಮಾಜದ ಗಣ್ಯರಾದ ಲಕ್ಷ್ಮಿಕಾಂತ್ ಮನೋಹರ ಶಂಕರ್ ರಾವ್ ಬಾಬುರಾವ್ ಎರಸ್ಕರ್ ತಿಳಿಸಿದ್ದಾರೆ.
ಬಂಗಾರಮ್ಮ ದೇವಿ ಪಲ್ಲಕ್ಕಿ ಭೋವಿ ಸಮಾಜದ ಕುಲದೇವತೆಯಾಗಿದ್ದು ಸಮಾಜದಲ್ಲಿ ಸುಖ ಸಮೃದ್ಧಿ ಮತ್ತು ಆರೋಗ್ಯ ನೆಲೆಸಲಿ ಎಂದು ಭಕ್ತರು ದೇವಿಗೆ ಮೊರೆ ಹೋಗೋದು ವಿಶೇಷ ವಾಡಿಕೆ. ಈ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಸಾಮಾಜಿಕ ನ್ಯಾಯಾಲಯ ಕೇಂದ್ರವಾಗಿದೆ. ಸಮಾಜದಲ್ಲಿ ಅಧರ್ಮ ಹೆಚ್ಚಾದಾಗ ಭಕ್ತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ರಕ್ಷಣೆಗಾಗಿ ದೇವಿ ಬಾಲಕಿ ರೂಪದಲ್ಲಿ ಅವತರಿಸಿ ಸಮಾಜವನ್ನು ಕಾಯುತ್ತಾಳೆ ಎಂಬುದು ಭಕ್ತರ ಗಾಢವಾದ ನಂಬಿಕೆ ಸಂಕಷ್ಟದ ಸಮಯದಲ್ಲಿ ಭಕ್ತರ ಬೆನ್ನಿಗೆ ನಿಲ್ಲುವ ತಾಯಿ ಇವಳು ಎನ್ನಲಾಗಿದೆ.
ಸುಮಾರು 40 ವರ್ಷಗಳ ಹಿಂದೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು ಸಮಾಜದ ಸಂಘಟನೆಗಳು ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಅನುಕೂಲಕ್ಕಾಗಿ ಶ್ರಮಿಸುತ್ತಿವೆ. ಸಮಾಜದಲ್ಲಿ ಯಾವುದೇ ಆಂತರಿಕ ವಿವಾದಗಳು ಅಥವಾ ಕುಟುಂಬಗಳಲ್ಲಿ ಸಮಸ್ಯೆ ಉಂಟಾದಲ್ಲಿ ಸಮಾಜದ ಹಿರಿಯರ ಉಪಸ್ಥಿತಿಯಲ್ಲಿ ದೇವಿಯ ಸನ್ನದಿಯಲ್ಲಿ ಪಂಚಾಯಿತಿ ನಡೆಸಿ ನ್ಯಾಯ ನೀಡುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ದೇವಿಯನ್ನು ಸಾಕ್ಷಿಯಾಗಿ ಇಟ್ಟುಕೊಂಡು ಪಂಚಾಯತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಇಡಿ ಸಮಾಜ ಗೌರವಿಸುತ್ತದೆ.
ಮುಖ್ಯ ದೇವಸ್ಥಾನದಲ್ಲಿ ಒಟ್ಟು ನಾಲ್ಕು ಮೂರ್ತಿಗಳಿದ್ದು ಮೊದಲು ಎರಡು ಮೂರ್ತಿಗಳು ಶ್ರೀ ಬಂಗಾರಮ್ಮ ದೇವಿಯದ್ದಾಗಿದ್ದು ಅವು ಪಾಷಾಣ ಶಿಲೆ ಮೂರ್ತಿಗಳಾಗಿವೆ. ಮೂರನೇ ಮೂರ್ತಿಯು ದೇವಿಯದ್ದಾಗಿದ್ದು ಇದನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಬನ್ನಿ ಮರದ ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ನಾಲ್ಕನೇ ಮೂರ್ತಿಯು ಪಾಷಾಣದಾಗಿದ್ದು ಇದು ಶ್ರೀ ಬಾಲದೇವಿಯ ಬಂಗಾರಮ್ಮ ದೇವಿಯ ಎತ್ತರದ ಮೂರ್ತಿ ಮತ್ತು ಕಲ್ಲಿನಲ್ಲಿ ಕೆತ್ತಲಾದ ನಾಗದೇವತೆಗಳ ಮೂರ್ತಿಗಳು ಇಲ್ಲಿ ಕಾಣಬಹುದು, ಪ್ರತಿ ಮಂಗಳವಾರ ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತವೆ. ಆಷಾಢಮಾಸದಲ್ಲಿ ವಿಶೇಷ ಪೂಜೆ ನೈವೇದ್ಯ ಬಲಿ ಅರ್ಪಿಸುವ ಸಂಪ್ರದಾಯವಿದೆ.
ವಿಜಯನಗರ ಸಾಮ್ರಾಜ್ಯದ ನಂತರದ, ಕಾಲಘಟ್ಟದಲ್ಲಿ ರಾಜರ ಪಲ್ಲಕ್ಕಿ ಹೋರುವ ಮತ್ತು ಯುದ್ಧಭೂಮಿಯಲ್ಲಿ ಪರಾಕ್ರಮಕ್ಕೆ ಮೆರೆಯುತ್ತಿದ್ದ ಈ ಸಮಾಜವು ಕಲ್ಬುರ್ಗಿ ಪ್ರದೇಶಕ್ಕೆ ವಲಸೆ ಬಂದಿದೆ ಎಂದು ಹೇಳಲಾಗಿದೆ. ಇಲ್ಲಿ ಸಣ್ಣ ದೇವಾಲಯ ನಿರ್ಮಿಸಿ ದೇವಿ ಆರಾಧನೆ ಆರಂಭಿಸಿದರು. ದಕ್ಷ ಪ್ರಜಾಪತಿಯ ಮಗಳು ಬಾಲಕಿ ರೂಪದಲ್ಲಿ ಬಂದು ಸಮಾಜವನ್ನು ರಕ್ಷಿಸಿದಳು ಎಂಬ ಪುರಾಣದ್ ಉಲ್ಲೇಖದೊಂದಿಗೆ ಈ ದೇವಿಯನ್ನು ಶ್ರೀ ಬಾಲ
ಬಂಗಾರಮ್ಮ ಎಂದು ಕರೆಯಲಾಗುತ್ತದೆ. ವಿಶ್ವಕರ್ಮ ಮತ್ತು ಭೋವಿ ಸಮಾಜಗಳ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ದೇವಿಯ ಬನ್ನಿ ಮರದ ಮೂರ್ತಿಯನ್ನು ವಿಶ್ವಕರ್ಮ ಬಡಿಗೇರ್ ಕುಟುಂಬದವರು ತಯಾರಿಸುತ್ತಾರೆ. ಪ್ರಸ್ತುತ 72 ವರ್ಷದ ಕಲ್ಯಾಣಿ ಚಿಂತಾಮಣಿ ಅವರು ಕಳೆದ 40 ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಿದ್ದಾರೆ.
ಆರ್ಯ ವೈಶ್ಯ ಸಮಾಜದವರು ಯಾವುದೇ ಮಂಗಳ ಕಾರ್ಯ ಅಥವಾ ಮದುವೆ ಸಮಾರಂಭದ ಮುಂಚೆ ಈ ದೇವಸ್ಥಾನದಲ್ಲಿ ತೈಲಾಭಿಷೇಕ್ ಮತ್ತು ಪೂಜೆ ಸಲ್ಲಿಸುವ ವಾಡಿಕೆ ಇಂದಿಗೂ ಇದೆ ಎನ್ನಲಾಗಿದೆ.