ವಡಗೇರ ತಾಲ್ಲೂಕು ಕೇಂದ್ರಕ್ಕೆ ಕಾಲೇಜು ಮಂಜೂರು ಮಾಡಿ : ಕರವೇ ಅಧ್ಯಕ್ಷ ಅಬ್ದುಲ್ ಚಿಗನೂರು ಆಗ್ರಹ
ಯಾದಗಿರಿ : ಯಾದಗಿರಿ ಮತಕ್ಷೇತ್ರದ ದೊರನಹಳ್ಳಿ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾಗಿರುವುದು ಸ್ವಾಗತಾರ್ಹವಾದರೂ, ತಾಲ್ಲೂಕು ಕೇಂದ್ರವಾದ ವಡಗೇರ ಪಟ್ಟಣಕ್ಕೆ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡದೆ ಶೈಕ್ಷಣಿಕವಾಗಿ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ವಡಗೇರ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಚಿಗನೂರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅಬ್ದುಲ್ ಚಿಗನೂರು ಅವರು, ದೊರನಹಳ್ಳಿಗೆ ಪಿಯು ಕಾಲೇಜು ಮಂಜೂರು ಮಾಡಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರ ಕಾರ್ಯ ಶ್ಲಾಘನೀಯ ಆದರೆ, ವಡಗೇರ ಪಟ್ಟಣವು ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ ದಶಕಗಳೇ ಕಳೆದರೂ ಇಲ್ಲಿಯವರೆಗೆ ಒಂದು ಸರ್ಕಾರಿ ಪದವಿ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜು ಇಲ್ಲದಿರುವುದು ಅತ್ಯಂತ ಖೇದಕರ ಸಂಗತಿ. ಈ ಭಾಗದ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ವಡಗೇರ ತಾಲ್ಲೂಕು ಕೇಂದ್ರವಾಗಿದ್ದರೂ ಇಲ್ಲಿ ಉನ್ನತ ಶಿಕ್ಷಣದ ಕಾಲೇಜುಗಳಿಲ್ಲದಿರುವುದು ಶಾಸಕರ ನಿರ್ಲಕ್ಷವೋ ಅಥವಾ ಪಟ್ಟಣದ ಮೇಲಿನ ಅಸಡ್ಡೆಯೋ ಅರ್ಥವಾಗುತ್ತಿಲ್ಲ. ಕೂಡಲೇ ಸರ್ಕಾರ ಮತ್ತು ಶಾಸಕರು ಎಚ್ಚೆತ್ತುಕೊಂಡು ವಡಗೇರ ಪಟ್ಟಣಕ್ಕೆ ನೂತನ ಪದವಿ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಬೇಕು. ಈ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಆಸರೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.