ಅಂತಾರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ.
ಚಿಕ್ಕಬಳ್ಳಾಪುರ:- ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ ಸರ್ಕಾರದಿಂದಲೇ ಜಾರಿಗೆ ಬಂದಿದ್ದು, ವ್ಯಾಪಾರಸ್ಥರು ಸರ್ಕಾರದಿಂದ ಜಾರಿಗೆ ಇರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಬಡ್ಡಿ ದಂಧೆಗೆ ಸಿಲುಕದಂತೆ ನೋಡಿಕೊಳ್ಳಿ ಎಂದು ಬೀದಿಬದಿ ವ್ಯಾಪಾರಸ್ಥರಿಗೆ ನಗರಸಭೆ ಪೌರಾಯುಕ್ತರಾದ ಮನ್ಸೂರ್ ಅಲಿ ಖಾನ್ ಕಿವಿಮಾತು ಹೇಳಿದರು.
ಅವರು ನಗರದ ಸಿವಿಲ್ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ಮಾತನಾಡುತ್ತಾ, ಸರ್ಕಾರವು ಬೀದಿ ಬದಿ ವ್ಯಾಪಾರವನ್ನು ನಡೆಸುವವರಿಗೆ ಪ್ರಮುಖ ಸ್ಥಳಗಳಲ್ಲಿ ವ್ಯಾಪಾರ ಕೇಂದ್ರವನ್ನು (ವೆಂಡಿಂಗ್) ನಿರ್ಮಿಸಲು ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚಿಸಿ ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನಿಸಿ ಮುಂದುವರಿಯಲಾಗುವುದು ಎಂದು ತಿಳಿಸಿದರು.
ಪಿ.ಎಂ. ಸ್ವನಿಧಿ ಯೋಜನೆ 10 ವರ್ಷದಿಂದ ಜಾರಿಯಲ್ಲಿದ್ದು, ಬೀದಿ ಬದಿ ವ್ಯಾಪಾರಸ್ಥರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು, ಈ ಯೋಜನೆ ಅಡಿ ವ್ಯಾಪಾರಸ್ಥರಿಗೆ 10,000 ದಿಂದ ಸುಮಾರು ಒಂದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವ್ಯಾಪಾರಕ್ಕೋಸ್ಕರ ಹಣ ಸಿಗುವುದು, ಈ ಯೋಜನೆಯನ್ನು ವ್ಯಾಪಾರಸ್ಥರು ಉಪಯೋಗಿಸಿಕೊಂಡರೆ, ಅವರು ಬಡ್ಡಿ ದಂಧೆಗೆ ಸಿಲುಕುವುದಿಲ್ಲ ಎಂದು ತಿಳಿಸಿದರು.
ನಂತರ ಮಾತನಾಡಿದ ಡಿವೈಎಸ್ಪಿ, ಪೊಲೀಸ್ ಇಲಾಖೆಯವರು ಇರುವುದು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯುವುದಕ್ಕಾಗಿ, ವ್ಯಾಪಾರಸ್ಥರು ಕೂಡ ಏನೇ ತೊಂದರೆ ಆದರೂ ತಕ್ಷಣವೇ ಪೊಲೀಸ್ ಇಲಾಖೆ ಅವರಿಗೆ ಮಾಹಿತಿ ನೀಡಿ, ಯಾವುದೇ ರೀತಿಯ ತೊಂದರೆಗೆ ಸಿಲುಕಬೇಡಿ, ಪೊಲೀಸ್ ಇಲಾಖೆಯವರು ನಿಮ್ಮ ಸಮಸ್ಯೆಗಳನ್ನು ನಿವಾರಿಸುತ್ತಾರೆ, ಕಾನೂನನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವುದರಿಂದ ಯಾರೇ ಆಗಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕರಿಗೋಸ್ಕರ ನಾನಾ ರೀತಿಯ ಕಾರ್ಯಕ್ರಮಗಳು ಪೊಲೀಸ್ ಇಲಾಖೆ ವತಿಯಿಂದ ಇರುತ್ತದೆ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳು ಕಚೇರಿಗೆ ಬಂದಾಗ ಸ್ವಲ್ಪ ಸ್ಪಂದನೆ ಸಿಗಲಿ, ನಗರಸಭಾ ಕಚೇರಿ, ಕಾರ್ಮಿಕ ಇಲಾಖೆ, ಪೊಲೀಸ್ ಸ್ಟೇಷನ್ ಗೆ ಬಂದಾಗ ಅವರಿಗೆ ಸ್ವಲ್ಪ ಸ್ಪಂದನೆ ಸಿಗಲಿ. ದೇಶದ ಆರ್ಥಿಕತೆಯಲ್ಲಿ ನಿಮ್ಮ ಕೊಡುಗೆ ಹೆಚ್ಚಿದೆ. ಸುಮಾರು 50 ಕೋಟಿ ಜನ ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎಂದು ಕೆ.ವಿ. ಟ್ರಸ್ಟ್ ಅಧ್ಯಕ್ಷರಾದ ಕೆ.ವಿ. ನವೀನ್ ಕಿರಣ್ ತಿಳಿಸಿದರು.
ಮುಂದುವರೆದು,ಸರ್ಕಾರದ ಸವಲತ್ತುಗಳನ್ನು ನೀವೆಲ್ಲರೂ ಸದುಪಯೋಗಪಡಿಸಿಕೊಳ್ಳಿ, ಬಡ್ಡಿಯ ದಂಧೆಗೆ ಬೀದಿ ಬದಿಯ ವ್ಯಾಪಾರಿಗಳು ಸಿಲುಕಿ ಹಾಕಿಕೊಳ್ಳುವುದು ಬೇಡ ಎಂದರು. ಡಾ. ಕೆ. ಸುಧಾಕರ್ ಅವರು ಶಾಸಕರಾಗಿದ್ದಾಗ, ಬೀದಿಬದಿ ವ್ಯಾಪಾರಸ್ಥರ ಸುಂಕ ಅವರ ಸ್ವಂತ ಖರ್ಚಿನಿಂದ ಕೊಡುತ್ತಿದರು, ಈ ಸಮಯದಲ್ಲಿ ನಾವು ಅವರನ್ನು ನೆನಪಿಸಿಕೊಳ್ಳಬೇಕು ಎಂದರಲ್ಲದೇ, ಮತ್ತೆ ಸುಧಾಕರ್ ಅವರನ್ನು ನಾನು ಮಾತನಾಡುತ್ತೇನೆ, ಹಿಂದೆ ಇದ್ದ ಅನುಕೂಲವನ್ನು ಮತ್ತೆ ಮುಂದುವರಿಸಲು ಮನವಿ ಮಾಡುತ್ತೇನೆ ಎಂದು ಈ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಶಬಾನ, ಕಾರ್ಮಿಕ ಇಲಾಖೆಯ ಮಂಜುಳಾ, ಮಾಜಿ ನಗರಸಭಾ ಸದಸ್ಯ ಮೊಬೈಲ್ ಬಾಬು, ಎಡುಕೊಂಡಲ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀನಿವಾಸ್, ಸಮಾಜ ಸೇವಕರಾದ ಯಲುವಹಳ್ಳಿ ಎನ್.ರಮೇಶ್, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಅಸ್ಲಾಂ ಪಾಷಾ, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸುರೇಶಪ್ಪ, ಖಜಾಂಚಿ ಗೋವಿಂದರಾಜು, ನಿರ್ಮಲ ಮೇರಿ, ದೊಡ್ಡ ವೆಂಕಟಮ್ಮ ಸೇರಿದಂತೆ ಇನ್ನಿತರರಿದ್ದರು.