
ಗ್ಯಾರಂಟಿ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಲಿ: ಸಂಗಮೇಶ ದೇಸಾಯಿ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷರ ಕರೆ; ಯಶೋಗಾಥೆ ಪುಸ್ತಕ ಬಿಡುಗಡೆ
ತಾಳಿಕೋಟಿ: "ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದು, ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟಿವೆ. ಯಾವುದೇ ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ," ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಗ್ಯಾರಂಟಿ ಯೋಜನೆಗಳ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ನಮ್ಮ ಪಕ್ಷದ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಗಳು ರಾಜ್ಯದ ಪ್ರತಿಯೊಬ್ಬರಿಗೂ, ಅದರಲ್ಲೂ ವಿಶೇಷವಾಗಿ ಬಡ ಜನತೆಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿವೆ. ಸಮಿತಿಯ ಸದಸ್ಯರು ಈ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ, ಪ್ರತಿಯೊಬ್ಬ ಅರ್ಹರಿಗೂ ಸೌಲಭ್ಯ ಸಿಗುವಂತೆ ಶ್ರಮಿಸಬೇಕು," ಎಂದು ಅವರು ಕರೆ ನೀಡಿದರು.
ಸಮಿತಿಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಮಾತನಾಡಿ, "ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬುದು ನಮ್ಮ ಗುರಿ. ಈಗಾಗಲೇ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಶೇ. 98ರಷ್ಟು ಪ್ರಗತಿ ಸಾಧಿಸಲಾಗಿದೆ. ಸರ್ಕಾರದ ನೆರವು ಜನರ ಮನೆ ಬಾಗಿಲಿಗೆ ತಲುಪುತ್ತಿದೆ," ಎಂದು ಮಾಹಿತಿ ನೀಡಿದರು.
ಯಶೋಗಾಥೆ ಪುಸ್ತಕ ಬಿಡುಗಡೆ
ಇದೇ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಂಡ ಫಲಾನುಭವಿಗಳ ಯಶಸ್ಸಿನ ಕಥೆಗಳನ್ನು ಒಳಗೊಂಡ "ಯಶೋಗಾಥೆ" ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಸಂಗನಗೌಡ ಅಸ್ಕಿ, ಇಬ್ರಾಹಿಂ ಮನ್ಸೂರ್, ಶಿವರಾಜ ಗುಂಡಕನಾಳ, ಮಲ್ಲಿಕಾರ್ಜುನ್ ಕುಂಬಾರ, ಮೆಹಬೂಬ ಅಲಿ ಮಕಾನದಾರ, ಮೋದಿನಸಾಬ ನಗಾರ್ಚಿ, ಲಕ್ಷ್ಮಿ ಆರ್. ಬಿರಾದಾರ, ಯಮನೂರಪ್ಪ ಬರದೇನಾಳ, ಮಹಾಲಕ್ಷ್ಮಿ ಸಜ್ಜನ, ಮಹೇಶ ಚಲವಾದಿ, ವಿಜಯ್ ಕಲಾಲ, ಆಸಿಫ್ ಕೆಂಭಾವಿ, ರಾಜು ಪಾಟೀಲ, ಶ್ರೀಶೈಲ್ ಕಾಟಾಪುರ ಹಾಗೂ ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ ಮತ್ತು ಹೆಸ್ಕಾಂನ ಅಧಿಕಾರಿಗಳು ಉಪಸ್ಥಿತರಿದ್ದರ. ವರದಿ, ಸಂಗನಗೌಡ . ಗಬಸಾವಳಗಿ