
ನಿವೃತ್ತ ಶಿಕ್ಷಕರಿಗೆ ಕುಟುಂಬದಿಂದ ಸಾರ್ಥಕ ಸೇವಾ ಸ್ಮರಣೆ: ಅಭಿಮಾನದ ಅಭಿನಂದನಾ ಸಮಾರಂಭ
ಇಳಕಲ್: ನಗರದ ಜೋಶಿ ಗಲ್ಲಿಯ ನಿವಾಸಿ, ನಿವೃತ್ತ ಶಿಕ್ಷಕ ಶ್ರೀ ಮಹಾಂತೇಶ ಬಸವಂತಪ್ಪ ತುಂಬದ ಅವರ ಸಾರ್ಥಕ ಸೇವೆಯನ್ನು ಸ್ಮರಿಸಿ, ಅವರ ಕುಟುಂಬ ಸದಸ್ಯರು ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮವು ಹೊಸಮನಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಎಲ್ಲ ಬಲ್ಲವರಿಲ್ಲ!
ಬಲ್ಲವರು ಬಹಳಿಲ್ಲ!
ಬಲ್ಲಿದರಿದ್ದು ಬಲವಿಲ್ಲ!
ಸಾಹಿತ್ಯ ಎಲ್ಲರಿಗಿಲ್ಲ ಸರ್ವಜ್ಞ!
ಈ ನುಡಿಯಂತೆ, ಶಿಕ್ಷಣವನ್ನು ಎಲ್ಲರೂ ಪಡೆಯಬೇಕೆಂಬ ಹಂಬಲವಿದ್ದರೂ, ಆ ಸರಸ್ವತಿಯು ಕೆಲವರನ್ನು ಮಾತ್ರ ತನ್ನ ಸೇವೆಗೆ ಆಯ್ಕೆ ಮಾಡಿಕೊಳ್ಳುತ್ತಾಳೆ. ಅದರಂತೆ, ದೇಶದ ಭವಿಷ್ಯವನ್ನು ನಿರ್ಮಿಸುವ ಗುರುತರ ಜವಾಬ್ದಾರಿಯನ್ನು ಹೊರುವ ಶಿಕ್ಷಕ ವೃತ್ತಿಗೆ ಸರಸ್ವತಿಯು ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತಾಳೆ. ಅಂತಹ ವಿಶೇಷ ವ್ಯಕ್ತಿಗಳಲ್ಲಿ ಶ್ರೀ ಮಹಾಂತೇಶ ತುಂಬದ ಅವರು ಒಬ್ಬರು.
ಮೂಲತಃ ಕುಷ್ಟಗಿ ತಾಲೂಕಿನ ಹೂಲಗೇರಿ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಇವರು, ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದ್ದ ಕುಟುಂಬದ ನಡುವೆಯೂ ಶಿಕ್ಷಣವನ್ನು ಪಡೆದು, ಉತ್ತಮ ಹುದ್ದೆಗೇರಬೇಕೆಂಬ ಅಚಲ ಸಂಕಲ್ಪ ಹೊಂದಿದ್ದರು. ಹೀಗಾಗಿ, ಕೃಷಿ ಕಾಯಕದ ಜೊತೆಗೇ ತಮ್ಮ ಶಿಕ್ಷಣದ ಹಂಬಲವನ್ನು ಜೀವಂತವಾಗಿರಿಸಿಕೊಂಡರು. ಪ್ರಾಥಮಿಕ ಶಿಕ್ಷಣವನ್ನು ಹೂಲಗೇರಿಯಲ್ಲಿ, ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಇಳಕಲ್ ನಗರದಲ್ಲಿ ಪೂರೈಸಿದರು.
ಛಲದಂಕ ಮಲ್ಲನಂತೆ ಸತತವಾಗಿ ಪ್ರಯತ್ನಿಸಿ, ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಶ್ರೀ ಮಹಾಂತೇಶ ಬಸವಂತಪ್ಪ ತುಂಬದ ಅವರು, ತಮ್ಮ ಜ್ಞಾನವನ್ನು ಬಡ ಮಕ್ಕಳಿಗೆ ಧಾರೆ ಎರೆಯಬೇಕೆಂಬ ಉದ್ದೇಶದಿಂದ ದಿನಾಂಕ 28-10-1994 ರಂದು ಕುಷ್ಟಗಿ ತಾಲೂಕಿನ ನೀಲೋಗಲ್ ಸರಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು.
ಅಲ್ಲಿ ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿ, ತಮ್ಮ ಕಾರ್ಯಕ್ಷಮತೆಯಿಂದ 'ತಾಲೂಕು ಉತ್ತಮ ಶಿಕ್ಷಕ' ಪ್ರಶಸ್ತಿಗೆ ಭಾಜನರಾಗಿದ್ದರು. ನಂತರ ಯಲಬುರ್ಗಾ ತಾಲೂಕಿನ ವಕ್ಕಲಕುಂಟ ಪ್ರೌಢಶಾಲೆಗೆ ವರ್ಗಾವಣೆಗೊಂಡು, ಅಲ್ಲಿಯೂ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದರು. 2009ರಲ್ಲಿ ಇಳಕಲ್ ತಾಲೂಕಿನ ಚಿಕ್ಕೊಡಾಪುರ ಪ್ರೌಢಶಾಲೆಗೆ, ಹಾಗೂ 2011ರಲ್ಲಿ ಬಲಕುಂದಿ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡರು. ತಮ್ಮ ವೃತ್ತಿ ಜೀವನದ ಕೊನೆಯ ಅವಧಿಯಲ್ಲಿ ಬಲಕುಂದಿ ಶಾಲೆಯಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.
ಮೇ 30 ರಂದು ತಮ್ಮ ವೃತ್ತಿ ಜೀವನದಿಂದ ನಿವೃತ್ತರಾಗುತ್ತಿರುವ ಶ್ರೀಯುತ ಮಹಾಂತೇಶ ಬಸವಂತಪ್ಪ ತುಂಬದ ಅವರ ವಿಶೇಷ ಮತ್ತು ವಿಶಿಷ್ಟ ಸೇವೆಯನ್ನು ಗೌರವಿಸಲು, ಇಳಕಲ್ಲಿನ ಹೊಸಮನಿ ಕಲ್ಯಾಣ ಮಂಟಪದಲ್ಲಿ ಅವರ ಕುಟುಂಬ ವರ್ಗದವರು ಈ ‘ಅಭಿಮಾನದ ಅಭಿನಂದನಾ ಸಮಾರಂಭ’ವನ್ನು ಏರ್ಪಡಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಾಹಿತಿಗಳು, ಶಿಕ್ಷಣ ಪ್ರೇಮಿಗಳು, ನಾಟಕಕಾರರು, ಜಾನಪದ ಕಲಾವಿದರು, ಕವಿಗಳು ಹಾಗೂ ಲೇಖಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಸೇವೆ ಸಲ್ಲಿಸಿದ ತುಂಬದ ಗುರುಗಳಿಗೆ ಗೌರವ ನಮನ ಸಲ್ಲಿಸಬೇಕಾಗಿ ಕೋರಲಾಗಿದೆ.
ವರದಿ: ಜಗದೀಶ ಜಿ. ಎಸ್., ಎಸ್ಸಿಎನ್ ಟಿವಿ ನ್ಯೂಸ್, ಇಳಕಲ್.