logo

ವಿಶೇಷ ಚೇತನರೊಂದಿಗೆ ಕರವೇ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ನಿಂಗರಾಜು ಗೌಡ್ರ ಹುಟ್ಟುಹಬ್ಬ ಆಚರಣೆ

ವಿಶೇಷ ಚೇತನರೊಂದಿಗೆ ಕರವೇ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ನಿಂಗರಾಜು ಗೌಡ್ರ ಹುಟ್ಟುಹಬ್ಬ ಆಚರಣೆ
ಜಿಲ್ಲಾ ಮಹಿಳಾಧ್ಯಕ್ಷೆ ಅನುರಾಧ ಅಶೋಕ್ ನೇತೃತ್ವದಲ್ಲಿ ದಿನಸಿ ಕಿಟ್‌ಗಳ ವಿತರಣೆ

ದೇವನಹಳ್ಳಿ: ಹುಟ್ಟು-ಸಾವು ಎರಡೂ ಪ್ರಕೃತಿಯ ನೈಜ್ಯ ನಿಯಮವಾಗಿದೆ. ಹುಟ್ಟಿದಾಗ ಏನಾದರೂ ಸಾಧಿಸದಿದ್ದರೂ ಸಾಮಾಜಿಕ ಸೇವೆಯನ್ನಾದರೂ ಮಾಡಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷೆ ಅನುರಾಧ ಅಶೋಕ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಗುರುಭವನದ ಹಿಂಭಾಗದಲ್ಲಿರುವ ಅಭಿವೃದ್ಧಿ ಫೌಂಡೇಷನ್‌ನ ವಿಶೇಷ ಚೇತನರ ಕೇಂದ್ರದಲ್ಲಿ ಕರವೇ ಸ್ವಾಭಿಮಾನಿ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ನಿಂಗರಾಜು ಗೌಡ ಅವರ ಜನ್ಮದಿನದ ಅಂಗವಾಗಿ ವಿಶೇಷ ಚೇತನರಿಗೆ ದಿನಸಿ ಕಿಟ್ ವಿತರಣಾ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಅನುರಾಧ ಅವರು ಮಾತನಾಡಿ, ರಾಜ್ಯಾಧ್ಯಕ್ಷ ನಿಂಗರಾಜು ಗೌಡ ಅವರ ಹುಟ್ಟುಹಬ್ಬವನ್ನು ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳೆಲ್ಲರೂ ಒಗ್ಗೂಡಿ ಇಲ್ಲಿನ ವಿಶೇಷ ಚೇತನರಿಗೆ ದಿನಸಿ ಕಿಟ್ ವಿತರಿಸುವ ಕೆಲಸ ಮಾಡಲಾಗುತ್ತಿದೆ. ಇವರ ಹುಟ್ಟುಹಬ್ಬ ಒಂದು ದಿನಕ್ಕೆ ಸೀಮಿತವಾಗಬಾರದೆಂಬ ಉದ್ದೇಶದಿಂದ ತಿಂಗಳಿಗೊಮ್ಮೆ ಇಲ್ಲಿನ ಕೇಂದ್ರಕ್ಕೆ ದಿನಸಿಕಿಟ್‌ಗಳನ್ನು ವಿತರಿಸುವ ಕೆಲಸವನ್ನು ಮಾಡಲಾಗುತ್ತದೆ. ಸುಮಾರು ೧೮ ವರ್ಷದಿಂದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನೊಂದವರಿಗೆ, ಬಡವರಿಗೆ, ದೀನ ದಲಿತರಿಗೆ ಮತ್ತು ರೈತರಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಹೋರಾಟದ ಮೂಲಕ ಸೇವೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೇವನಹಳ್ಳಿಯ ಖಾಸಗಿ ಲೇಔಟಿನವರು ಒತ್ತುವರಿ ಮಾಡಿರುವ ಜಾಗಗಳನ್ನು ಬಿಡಿಸುವ ಕೆಲಸಕ್ಕೆ ಹೋರಾಟ ಮಾಡುವ ತೀರ್ಮಾನ ಮಾಡಲಾಗಿದೆ ಎಂದರು.

ಕಮಲ್ ಹಾಸನ್ ಹೇಳಿಕೆಗೆ ಕಿಡಿ:
ತಮಿಳು ಚಲನಚಿತ್ರ ನಟ ಕಮಲ್ ಹಾಸನ್ ಕನ್ನಡದ ಬಗ್ಗೆ ಹೇಳಿಕೆ ನೀಡಿರುವುದು ಇಲ್ಲಿನ ಕನ್ನಡಿಗರಿಗೆ ಕೆರಳಿಸಿದೆ. ಇವರಿಗೆ ಜ್ಞಾನದ ಕೊರತೆ ಇದೆ ಅನಿಸುತ್ತದೆ. ಕನ್ನಡ ಭಾಷಾ ಹುಟ್ಟಿದ ಬಗ್ಗೆ ತಿಳಿದುಕೊಂಡು ಮಾತಾಡ್ಬೇಕು. ಕನ್ನಡ ಪರ ಹೋರಾಟಗಾರರು ಕ್ಷಮಾಪಣೆ ಕೇಳುವಂತೆ ಒತ್ತಾಯ ಮಾಡಲಾಗುತ್ತಿದೆ. ಈಗಾಗಲೇ ನಮ್ಮ ಸಂಘಟನೆ ಮೂಲಕ ರಾಜ್ಯ ಸರಕಾರಕ್ಕೆ ಪತ್ರವನ್ನು ಸಹ ಕೊಡಲಾಗಿದೆ. ಒಂದು ವೇಳೆ ಕನ್ನಡಿಗರಿಗೆ ಕ್ಷಮಾಪಣೆ ಕೇಳಿಲ್ಲವೆಂದರೆ, ಇವರ ಚಲನಚಿತ್ರಗಳನ್ನು ರಾಜ್ಯದಲ್ಲಿ ಪ್ರದರ್ಶಿಸದಂತೆ ಬ್ಯಾನ್ ಮಾಡಲು ಈಗಾಗಲೇ ಪ್ರತಿಭಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳಾದ ರತ್ನಮ್ಮ, ಚೌಡಮ್ಮ, ಇಂದಿರಾ, ಗೀತಾ, ರೂಪ, ಬೇಬಿ, ಚೈತ್ರ, ಜಾಲಿಗೆ ವೆಂಕಟೇಶ್, ದ್ಯಾವರಹಳ್ಳಿ ಗಿರೀಶ್, ಗೋಖರೆ ಮಧು ವಿಜಯ್, ಮಂಜುನಾಥ್, ವಿಶೇಷ ಚೇತನ ಫಲಾನುಭವಿಗಳು ಸೇರಿದಂತೆ ಹಲವರು ಇದ್ದರು.

Reporter: HYDER SAB | 9743784848
ಚಿತ್ರ:

11
1271 views