logo

ದಕ್ಷಿಣ ಕನ್ನಡದಲ್ಲಿ ಖಾಕಿ ಬೇಟೆ ಶುರು : ರೌಡಿಶೀಟರ್‌ಗಳು, ಸಮಾಜಘಾತುಕರ ಬೆನ್ನುಬಿದ್ದ ಪೊಲೀಸರು ಬಂಧನಕ್ಕೆ ಹೆದರಿ ಭರತ್ ಕುಮ್ಡೇಲ್, ಶ್ರೀಕಾಂತ್ ಶೆಟ್ಟಿ ಹೊರರಾಜ್ಯಕ್ಕೆ ಪರಾರಿ?

ದಕ್ಷಿಣ ಕನ್ನಡದಲ್ಲಿ ಖಾಕಿ ಬೇಟೆ ಶುರು : ರೌಡಿಶೀಟರ್‌ಗಳು, ಸಮಾಜಘಾತುಕರ ಬೆನ್ನುಬಿದ್ದ ಪೊಲೀಸರು

ತಾರೀಕು 31/05/2025 ಶನಿವಾರ


ಮಂಗಳೂರು : ಮಂಗಳೂರಿನಲ್ಲಿ ಸರಣಿ ದ್ವೇಷ ಭಾಷಣಗಳು, ಕೊಲೆಗಳು, ಅಹಿತಕರ ಘಟನೆಗಳು ಕಾಂಗ್ರೆಸ್ ಸರ್ಕಾರವನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಜಿಲ್ಲೆಯ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಸ್ಥಾಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ ಮತ್ತು ಮಂಗಳೂರು ಪೊಲೀಸ್ ಆಯುಕ್ತರನ್ನು ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ದಕ್ಷ ಐಪಿಎಸ್ ಅಧಿಕಾರಿಗಳನ್ನು ನೇಮಿಸಿತ್ತು. ದ್ವೇಷ ಭಾಷಣಕಾರರು, ರೌಡಿಶೀಟರ್ ಗಳು ಮತ್ತು ಸಮಾಜಘಾತುಕರ ಹೆಡೆಮುರಿ ಕಟ್ಟಿ ದಕ್ಷಿಣ ಕನ್ನಡವನ್ನು ನಿಯಂತ್ರಣಕ್ಕೆ ತರುವ ಟಾಸ್ಕ್ ನೀಡಿ ಖುದ್ದು ಸಿಎಂ ಸಿದ್ದರಾಮಯ್ಯನವರೇ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಮಂಗಳೂರಿಗೆ ಕಳಿಸಿಕೊಟ್ಟಿದ್ದಾರೆ.

ನೂತನ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅರುಣ್ ಕೆ ಅಧಿಕಾರ ಸ್ವೀಕರಿಸಿ ತಮ್ಮ ಕೆಲಸ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಅಧಿಕಾರಿಗಳು ಸಮಾಜಘಾತುಕರ ಬೆನ್ನುಬಿದ್ದಿದ್ದು, ರೌಡಿಶೀಟರ್‌ಗಳ ಹೆಡೆಮುರಿ ಕಟ್ಟುವ ಕೆಲಸ ಶುರು ಮಾಡಿದ್ದಾರೆ. ಬಾಲ ಬಿಚ್ಚದಂತೆ ಅಪರಾಧ ಜಗತ್ತಿನಲ್ಲಿ ತೊಡಗಿಕೊಂಡವರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾರಕಾಸ್ತ್ರ ಇಟ್ಟುಕೊಂಡಿರುವ ಹಲವರ ಮನೆಗಳು ಮತ್ತು ವಾಹನಗಳ ಮೇಲೆ ನಿನ್ನೆಯಿಂದ ಪೊಲೀಸರ ದಾಳಿಗಳು ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಪೊಲೀಸರ ದಾಳಿಗೆ ಭಯಬಿದ್ದು ಹಲವರು ಜಿಲ್ಲೆಯನ್ನು ತೊರೆದು ಎಸ್ಕೇಪ್ ಆಗಿದ್ದಾರೆ ಎನ್ನಲಾಗುತ್ತಿದೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ದ. ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರತೀಕಾರದ ಭಾಷಣ ಮಾಡಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರ ಬಂಧನಕ್ಕೆ ಹೆದರಿ ಪುತ್ತೂರು ಮತ್ತು ಬಜ್ಪೆಯಲ್ಲಿ ಪ್ರತೀಕಾರದ ಭಾಷಣ ಮಾಡಿದ್ದ ಬಜರಂಗದಳ ಮುಖಂಡನಾಗಿರುವ ರೌಡಿಶೀಟರ್ ಭರತ್ ಕುಮ್ಡೇಲ್ ಮತ್ತು ಸಂಘಪರಿವಾರದ ಮುಖಂಡ ಶ್ರೀಕಾಂತ್ ಶೆಟ್ಟಿ ಹೊರರಾಜ್ಯಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಸುಧೀರ್ ಕುಮಾರ್ ರೆಡ್ಡಿ ಮತ್ತು ಅರುಣ್ ಕೆ ಅವರು ಮಂಗಳೂರಿಗೆ ಕಾಲಿಡುತ್ತಿದ್ದಂತೆಯೇ ಭರತ್ ಕುಮ್ಡೇಲ್ ಮತ್ತು ಶ್ರೀಕಾಂತ್ ಶೆಟ್ಟಿ ಇಬ್ಬರು ಆರೋಪಿಗಳು ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ

9
401 views