
ರಾಮನಗರ ಈಗ ಬೆಂಗಳೂರು ದಕ್ಷಿಣವಾಯಿತು.
ಕರ್ನಾಟಕದ DCM ಡಿ. ಕೆ. ಶಿವಕುಮಾರ ಹಠ ಹಿಡಿದು ಜಿದ್ದಿಗೆ ಬಿದ್ದು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಿದ್ದಾರೆ ಇದರಿಂದ ರಾಮನಗರ ಜಿಲ್ಲೆಯ ಜನರಿಗೆ ಸಾಕಷ್ಟು ಉಪಯೋಗ ಆಗುತ್ತದೆ ಎಂದು ತಮ್ಮ ಮಾಮೂಲಿ ಚುನಾವಣೆ ಭಾಷಣದ ಸಾರವನ್ನು ಮತ್ತೆ ಇಲ್ಲಿ ವ್ಯಕ್ತಪಡಿಸಿದರು. ಇದು ಕುಮಾರಸ್ವಾಮಿ ಮೇಲಿನ ದ್ವೇಷಕ್ಕೆ ಜಿದ್ದಿಗೆ ಬಿದ್ದಂತೆ ಮಾಡಿದ್ದಾರೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.ಹೆಸರು ಬದಲಾವಣೆಯನ್ನು ಇದೆ ಕಾಂಗ್ರೇಸ್ ಪಕ್ಷದವರು ತುಂಬಾ ವಿರೋಧ ಮಾಡುತ್ತಿದ್ದರು ಇದರಿಂದ ಬಿಜೆಪಿಯವರಿಗೂ ಕೊಂಚ ನಿರಾಳ ಆಗಿದ್ದಾರೆ ಎನಿಸುತ್ತದೆ. ಇನ್ನು ಮಾಮೂಲಿಯಂತೆ ಇದಕ್ಕೆ ಕರ್ನಾಟಕದ ಬುದ್ದಿಜೀವಿಗಳು, ಪ್ರಗತಿಪರರು, ಸಮಾಜವಾದಿಗಳು, ಸಾಹಿತಿಗಳು, ಕನ್ನಡ, ಸಂಘಟನೆಗಳ ಯಾವುದೇ ರೀತಿಯ ವಿರೋಧವಿಲ್ಲ ಹಾಗೂ ಅವರು ಕಾಂಗ್ರೇಸ್ ಸರ್ಕಾರದ ಯಾವ ನಿರ್ಧಾರವನ್ನು ಇವರು ವಿರೋಧಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ ಎನಿಸುತ್ತದೆ, ಮಾನ್ಯ ಡಿಸಿಎಂ ಅವರು ಮುಂಚೆನೇ ಒಂದು ಡಿನ್ನರ ಪಾರ್ಟಿ ಅರೇಂಜ್ ಮಾಡಿ ಹೇಗೋ ಇವರಿಂದ ಒಪ್ಪಿಗೆಯನ್ನು ತೆಗೆದುಕೊಂಡಿದ್ದಾರೆ ಎನಿಸುತ್ತದೆ. ಏಕೆಂದರೆ ಹಿಂದೊಮ್ಮೆ ಸಾಹಿತಿಗಳು ರಾಜಕಾರಣಿಗಳಂತೆ ಎಂದು ಹೇಳುತ್ತಲೇ ಅವರೇ ಅಕಾಡೆಮಿ ಅಧ್ಯಕ್ಷರ ಮೀಟಿಂಗ್ ಕಾಂಗ್ರೇಸ್ ಪರ ಉಚಿತ ಯೋಜನೆಗಳ ಹಾಗೂ ಸರ್ಕಾರದ ಪರ ಪ್ರಚಾರ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು ಅದನ್ನು ಇವರು ಶಿರಸಾ ವಹಿಸಿ ಆಜ್ಞೆಯನ್ನು ಪಾಲಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ಹೆಸರು ಇದೀಗ ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲಾಗಿದೆ. ಕಾರಣ ಬೆಂಗಳೂರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಒಳ್ಳೆಯ ಹೆಸರು. ಆದರೆ ಬೆಂಗಳೂರು ತನ್ನ ಹಿಂದಿನ ಬ್ರ್ಯಾಂಡ್ ಉಳಿಸಿಕೊಂಡಿದೆಯಾ ಎಂಬುದನ್ನೂ ನಾವು ಗಮನಿಸಬೇಕು.
ಈಗಾಗಲೇ ಭಾಷೆಯ ಹೆಸರಿನಲ್ಲಿ ನಮ್ಮ ಕೆಲವು ವಸೂಲಿಗಾರರ ಅವಿವೇಕದಿಂದ ವಿವಿಧ ಭಾಷಿಕರ ನಡುವಿನ ಸಾಮರಸ್ಯಕ್ಕೆ ಹಾನಿಯಾಗಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಈಗಾಗಲೇ ಕೆಲವು ಕಂಪನಿ ಮುಖ್ಯಸ್ಥರು ತಮ್ಮ ಕಂಪನಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಮಾತು ಹೇಳುತ್ತಿದ್ದಾರೆ. ಅನ್ಯ ಭಾಷಿಕರು ಬಿಡಿ ನಮ್ಮದೇ ನೆಲದ ತುಳು, ಕೊಡವ, ಬ್ಯಾರಿ, ಉರ್ದು ಭಾಷಿಕರನ್ನು ಕೂಡ ಬೆಂಗಳೂರಿಗರು ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ಇಲ್ಲಿಯ ರಸ್ತೆ ಗುಂಡಿಗಳು ಕನಿಷ್ಠ ತಿಂಗಳಿಗೆ ಒಂದು ಬಲಿ ಪಡೆಯುವ ಮೂಲಕ ಸವಾರರ ಪಾಲಿಗೆ ನೆಲಬಾಂಬುಗಳಾಗಿವೆ. ಯಾವುದೇ ನಗರದ ಮೂಲ ಸೌಕರ್ಯಗಳಲ್ಲಿ ರಸ್ತೆಯೇ ಅತಿ ಮುಖ್ಯವಾದದ್ದು ಆದರೆ ಇಲ್ಲಿನ ರಸ್ತೆಗಳು ನಮ್ಮ ನಗರದ ಜನಸಂಖ್ಯೆಗೆ, ಇಲ್ಲಿಯ ಉದ್ಯಮಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲ. ಈಗಲೇ ಹೀಗಾದರೆ ಇನ್ನೂ ಹತ್ತು ಹದಿನೈದು ವರ್ಷದ ನಂತರ ಹೇಗಿರಬಹುದು ಎಂಬ ಪ್ರಶ್ನೆ ಇಲ್ಲಿ ಉದ್ಯಮ ಸ್ಥಾಪಿಸುವವರ ಮನಸ್ಸಿನಲ್ಲಿ ಮೂಡದೆ ಇರುತ್ತದೆಯೇ?
ಬೆಂಗಳೂರಿನ ಟ್ರಾಫಿಕ್ ವಿಷಯವಂತೂ ಗೊತ್ತೇ ಇದೆ. ದುಬ್ಯೆಗೆ ಹೊರಟ ಗೆಳೆಯರನ್ನು ದೇವನಹಳ್ಳಿಯಲ್ಲಿ ವಿಮಾನ ಹತ್ತಿಸಿ ಬರಲು ಹೋದವರು ವಾಪಸು ಮನೆ ತಲುಪುವ ಮೊದಲೇ ಅವರ ವಿಮಾನ ದುಬೈಗೆ ತಲುಪಿರುತ್ತದೆ ಎಂಬ ಹಳೆಯ ಜೋಕ್ ನೀವು ಕೇಳಿರಬಹುದು. ಈಗಿನ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ನೀವು ಮನೆ ತಲುಪುವ ಮೊದಲೇ ಅವರು ಚಿನ್ನದ ಬಿಸ್ಕತ್ ತೆಗೆದುಕೊಂಡು ವಾಪಸ್ ಬಂದಿರುತ್ತಾರೆ. ಇಲ್ಲಿಯ ದುಡಿಯುವ ವರ್ಗ ಪ್ರತಿದಿನ ಕನಿಷ್ಠ 4 ರಿಂದ 5 ಗಂಟೆ ತನ್ನ ಅತ್ಯಮೂಲ್ಯ ಸಮಯವನ್ನು ಪ್ರಯಾಣದಲ್ಲಿಯೇ ಕಳೆಯುತ್ತಿದೆ. ಉತ್ಪಾದಕ ಚಟುವಟಿಕೆಗೆ ಇದರಿಂದ ಎಂತಹ ಹೊಡೆತ ಆಗುತ್ತಿದೆ ಎಂಬುದು ನಮ್ಮ ಸರ್ಕಾರಗಳಿಗೆ ಅರ್ಥವಾಗುತ್ತಿಲ್ಲ.
ಇನ್ನು ಮಳೆ ಬಂದರೆ ಸಿಲಿಕಾನ್ ಸಿಟಿ ಸಿಂಕ್ ಸಿಟಿ ಆಗುತ್ತೆ. ಸಾವಿರಾರು ಜನ ಮನೆ ಬಿಟ್ಟು ಹೊರಬರುವುದೇ ಕಷ್ಟವಾಗುತ್ತದೆ. ನಮ್ಮ ಸರ್ಕಾರಿ ಇಲಾಖೆಗಳು ಮಳೆಯ ನಷ್ಟವನ್ನು ಲೆಕ್ಕ ಹಾಕುವಾಗ ಕೇವಲ ಹಾನಿಯಾದ ವಸ್ತುಗಳನ್ನು ಲೆಕ್ಕ ಹಾಕುತ್ತವೆ. ಆದರೆ ಇದರಿಂದ ಹಾನಿಯಾಗಿರುವ ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಬಗ್ಗೆ ಲೆಕ್ಕ ಹಾಕುತ್ತಿಲ್ಲ.
ಹೀಗಿರುವಾಗ ನಾವು ಬ್ರ್ಯಾಂಡ್ ಬೆಂಗಳೂರಿನ ಉಪಯೋಗ ಪಡೆಯುವುದರ ಕಡೆ ಇರುವ ಮುತುವರ್ಜಿಯನ್ನು ಅದರ ಬ್ರ್ಯಾಂಡ್ ಉಳಿಸುವ ಕಡೆಗೂ ತೋರಿಸಬೇಕು. ಇಲ್ಲದಿದ್ದರೆ ಇನ್ನೂ ಕೆಲವೇ ವರ್ಷದಲ್ಲಿ ಬೆಂಗಳೂರು ಒಳ್ಳೆಯ ಕಾರಣಕ್ಕಲ್ಲ ಕೆಟ್ಟ ಉದಾಹರಣೆಗೆ ಬ್ರ್ಯಾಂಡ್ ಆಗುತ್ತದೆ.