
ಕರ್ನಾಟಕ ಮಂಗಳೂರು | ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ: ಲಕ್ಷಾಂತರ ಮಂದಿ ಭಾಗಿ ಅಡ್ಯಾರ್ ಶಾ ಮೈದಾನಕ್ಕೆ ಹರಿದು ಬಂದ ಜನ ಸಾಗರ ಹೋ ಸಾಗರ
ಮಂಗಳೂರು: ನಗರ ಹೊರವಲಯದ ಅಡ್ಯಾರ್ ಶಾ ಮೈದಾನದಲ್ಲಿ ನಡೆಯುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ.
ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಆಯೋಜಿಸಲಾದ ಪ್ರತಿಭಟನಾ ಸಮಾವೇಶಕ್ಕೆ ರಾಷ್ಟ್ರೀಯ ಹೆದ್ದಾರಿಯ ಬಿಸಿ ರೋಡ್ ಮತ್ತು ಮಂಗಳೂರು ಕಡೆಯಿಂದ ವಾಹನಗಳಲ್ಲಿ ಬಂದ ಪ್ರತಿಭಟನಾಕಾರರು ಒಂದು ಕಿಲೊಮೀಟರಿಗಿಂತಲೂ ದೂರ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಬಂದರು.
ಬಿಸಿಲ ಝಳದ ನಡುವೆಯೂ ಮಧ್ಯಾಹ್ನ 2 ಗಂಟೆಯಿಂದಲೇ ಅಡ್ಯಾರ್ ಕಣ್ಣೂರಿನತ್ತ ಜನರು ವಿವಿಧ ಕಡೆಗಳಿಂದ ಆಗಮಿಸಲಾರಂಭಿಸಿದ್ದು, ಹೆದ್ದಾರಿಯುದ್ದಕ್ಕೂ ವಾಹನ ಸಂಚಾರ ನಿಧಾನಗತಿಯಲ್ಲಿ ಸಂಚರಿಸುತ್ತಿತ್ತು. ಇತ್ತ ನಗರದ ವಿವಿಧ ಕಡೆಗಳಲ್ಲಿ ಮಧ್ಯಾಹ್ನದಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮೊಬೈಲ್ ನೆಟ್ ವರ್ಕ್ ಬಹುತೇಕವಾಗಿ ಜಾಮ್ ಆಗಿದ್ದು, ಸಂಪರ್ಕ, ಸಂವಹನಕ್ಕೆ ಅಡ್ಡಿಯಾಯಿತು.
ರಾಷ್ಟ್ರಧ್ವಜ ಹಿಡಿದುಕೊಂಡು ಬಂದ ಪ್ರತಿಭಟನಾಕಾರರು ಮೈದಾನದ ಒಳಗೆ ಬಂದಾಗ ರಾಷ್ಟ್ರಧ್ವಜಗಳೇ ರಾರಾಜಿಸಿದವು. ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಮಾಡದಂತೆ, ಉದ್ರೇಕಕಾರಿ ಘೋಷಣೆ ಕೂಗದಂತೆ, ಆಕ್ರೋಶಕ್ಕೆ ಒಳಗಾಗದಂತೆ ಸಂಘಟಕರು ಪದೇ ಪದೇ ಮನವಿ ಮಾಡಿದರು.
ಶಾಂತಿಯುತ ಹೋರಾಟ ಮಾಡಬೇಕು, ಆವೇಶ, ಆಕ್ರೋಶವನ್ನು ಬದಿಗೊತ್ತಿ ‘ನಮ್ಮ ಸಂಸ್ಕೃತಿಯ ಪ್ರಕಾರ ವರ್ತಿಸಬೇಕು’ ಎಂದು ಮನವಿ ಮಾಡಲಾಗುತ್ತಿತ್ತು. ಮರವೇರಿ ಕುಳಿತಿದ್ದ ಯುವಕರು ಕೆಳಗೆ ಇಳಿಯುವಂತೆಯೂ ಮನವಿ ಮಾಡಲಾಯಿತು