logo

ಸಚಿವ ಪ್ರಿಯಾಂಕ್ ಖರ್ಗೆಗೆ ಡಾ.ಉಮೇಶ್‌ ಜಾಧವ್‌ ತಿರುಗೇಟು

ಹೈಲೈಟ್ಸ್‌:
* ಪ್ರಿಯಾಂಕ್ ಖರ್ಗೆ ವಿರುದ್ಧ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಕಿಡಿ.

* ಕಾಂಗ್ರೆಸ್ ಸಾಧನೆಯನ್ನು ಪುನಃ ಪುನಃ ಹೇಳುತ್ತಾರೆಂದು ಟೀಕೆ.

* ಕಾಂಗ್ರೆಸ್ಸಿನವರು ರೀಲು ಬಿಡುವುದರಲ್ಲಿ ಉತ್ತಮ ಎಂದು ಹೇಳಿದ ಜಾಧವ್.

ಕಲಬುರಗಿ: ಕಾಂಗ್ರೆಸಿನವರು 65 ವರ್ಷ ಹಿಂದೆ ಮಾಡಿದ ಕೆಲಸಗಳನ್ನೇ ಮತ್ತೆ ಮತ್ತೆ ಹೇಳಿ ರೀಲ್ ಬಿಡುತ್ತಿದ್ದಾರೆ. ಆದರೆ, ಬಿಜೆಪಿ 10 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದ ರಿಯಲ್ ಕೆಲಸಗಳನ್ನು ಜನರ ಮುಂದೆ ಇಟ್ಟಿದೆ ಎಂದು ಲೋಕಸಭಾ ಸದಸ್ಯ ಡಾ.ಉಮೇಶ್‌ ಜಾಧವ್‌ ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿದರು.

ನಗರದ ಔಷಧ ಭವನದಲ್ಲಿಬಿಜೆಪಿಯ ದಕ್ಷಿಣ ಮಂಡಲ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ ಖರ್ಗೆ ಮೂರು ಆರ್‌ಗಳ ಬಗ್ಗೆ ಮಾತನಾಡಿ, ಕಾಂಗ್ರೆಸ್ಸಿನ 65 ವರ್ಷಗಳಲ್ಲಿ ಮಾಡಿದ ಕೆಲಸಗಳನ್ನೇ ಮತ್ತೆ ಮತ್ತೆ ಹೇಳಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ 10 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದ ಕೆಲಸಗಳನ್ನು ಜನಮನಕ್ಕೆ ಮುಟ್ಟುವಂತೆ ಮಾಡಿ ತೋರಿಸಿದ್ದಾರೆ. ಕಾಂಗ್ರೆಸ್‌ನವರ ಆರ್‌ ಅಂದರೆ ಅದು ರೀಲ್‌ ಬಿಡುವುದೇ ಆಗಿದೆ. ಬಿಜೆಪಿಯ ಆರ್‌ ಅಂದರೆ ರಿಯಲ್‌ ಕೆಲಸ ಎಂದರು.

ಈಗಿನ ಅಭ್ಯರ್ಥಿ, ಹಿಂದಿನ ಅಭ್ಯರ್ಥಿ ಜತೆ ಮಾತ್ರ ಚರ್ಚೆ: ಕಲಬುರಗಿಯಲ್ಲಿಯಾರಪ್ಪನೂ ಬಂದರೂ ಬಿಜೆಪಿಯನ್ನಾಗಲಿ, ಜಾಧವ್‌ನನ್ನಾಗಲಿ ಹೊರಹಾಕಲು ಸಾಧ್ಯವಿಲ್ಲ. ಒಂದೇ ಒಂದು ಕೆಲಸ ಮಾಡಿ ಇದನ್ನು ತೋರಿಸಿರಿ ಎಂದು ಮೂದಲಿಸಿದವರಿಗೆ 50 ಅಲ್ಲ100 ಕೆಲಸಗಳ ಪಟ್ಟಿಯನ್ನೇ ಕೊಟ್ಟರೂ ಬಹಿರಂಗ ಚರ್ಚೆಗೆ ಮುಂದಾಗುವುದಿಲ್ಲ ಎಂದು ಹೇಳಿದರು.

ಅಲ್ಲದೆ, ನಿಮ್ಮ ಈಗಿನ ಅಭ್ಯರ್ಥಿಯಾಗಲಿ ಅಥವಾ ಈ ಹಿಂದಿನ ಅಭ್ಯರ್ಥಿಯಾಗಲಿ ಬಹಿರಂಗ ಚರ್ಚೆಗೆ ಬಂದರೆ ಈಗಲೂ ನಾನು ಚರ್ಚೆಗೆ ರೆಡಿ ಎಂದು ಜಾಧವ್‌ ಸವಾಲೆಸಿದರು. ಸಿಯುಕೆ, ವಿಮಾನ ನಿಲ್ದಾಣ ನಾವೇ ಮಾಡಿದ್ದೇವೆ ಎಂದು ಹೇಳಿದರು. ಆ ಮೂಲಕ, ಪ್ರಿಯಾಂಕ ಖರ್ಗೆ ಮೊದಲು ಸಿಯುಕೆಗೆ ಜಮೀನು ಕೊಟ್ಟಿದ್ದು ಮತ್ತು ವಿಮಾನ ನಿಲ್ದಾಣದ ಕಾರ್ಯ ಆರಂಭಿಸಿದ್ದು ಬಿಜೆಪಿ ಮತ್ತು ಬಿ.ಎಸ್‌.ಯಡಿಯೂರಪ್ಪ ಎಂಬುದು ನಿಮಗೆ ನೆನಪಿರಲಿ ಎಂದು ಟಾಂಗ್‌ ನೀಡಿದರು.

ಪ್ರಿಯಾಂಕ ಖರ್ಗೆ 13ನೇ ತಾರೀಕಿಗೆ ಬಂದ ಕೊಲೆ ಬೆದರಿಕೆ ಪತ್ರದ ಬಗ್ಗೆ ಈವರೆಗೂ ಸತ್ಯಾಂಶ ಹೊರತರಲು ಯಾಕೆ ವಿಫಲರಾಗಿದ್ದೀರಿ? ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಹೀಗೆ ಹೇಳಿದರೆ ಜಾಧವ್‌ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸುವ ನೀವು ಬೆದರಿಕೆ ಪತ್ರ ಬರೆದ ಬಗ್ಗೆ ಜಾಧವ್‌ ಉತ್ತರಿಸಲಿ ಎಂದು ಹೇಳಿದ್ದು ಮರೆತು ಹೋಯಿತೆ? ಎಂದು ಹೇಳಿದ್ದಾರೆ. ನಾವೇ ಎಲ್ಲಮಾಡಿದ್ದು ಎಂದು ಹೇಳುವ ಪ್ರಿಯಾಂಕ್‌ ಮೊದಲು ಬಿಜೆಪಿ ಮಾಡಿದ ಸಾಧನೆಗಳನ್ನು ನೋಡಲಿ. ಜತೆಗೆ ಪ್ರಧಾನಮಂತ್ರಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅರಿತುಕೊಳ್ಳಲಿ ಎಂದು ಜಾಧವ್ ಹೇಳಿದರು.

0
734 views