ಕೆಎಚ್ಎಂಗೆ ಡಿಸಿಎಂ ಅಥವಾ ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನ ನೀಡದೆ ಅನ್ಯಾಯ
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನಮಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಮಾದಾರ ಮಹಾ ಸಭಾದ ಮುಖಂಡ ವಿಜಯಪುರ ವೇಣುಗೋಪಾಲ್ ಹೇಳಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಾದಾರ ಸಮುದಾಯದವರು ಒಟ್ಟಾಗಿ ಸೇರಿ ಕೆಎಚ್ ಮುನಿಯಪ್ಪ ಅವರಿಗೆ ನೀಡಿರುವ ಸಚಿವ ಸ್ಥಾನ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆಯನ್ನು ಹೊಂದಿರುವ ಇವರಿಗೆ ಸಚಿವ ಸ್ಥಾನವನ್ನು ಮತ್ತೇ ನೀಡಲಾಗಿದೆ. ಇದು ಹಿರಿಯ ರಾಜಕಾರಣಿಗೆ ಮಾಡಿರುವ ಅಪಮಾನವಾಗಿದೆ. ಇದನ್ನು ಮಾದಾರ ಸಮುದಾಯ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ಸಮಾಜದ ನಾಯಕರಿಗೆ ಸಚಿವ ಸ್ಥಾನ ಹಂಚಿಕೆಯಲ್ಲಿ ಅವಮಾನ ಮಾಡುವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಅವರ ವಯಸ್ಸಿಗಾದರೂ ಬೆಲೆ ನೀಡಬೇಕಿತ್ತು. ಕಾಂಗ್ರೆಸ್ ಸರಕಾರದಲ್ಲಿ ಒಳಮೀಸಲಾತಿ ವಿಚಾರದಲ್ಲೂ ಹೆಚ್ಚು ಶ್ರಮವಹಿಸಿದ ನಮ್ಮ ಸಮುದಾಯದ ವರಿಷ್ಠ ಮುಖಂಡ ಕೆ.ಎಚ್.ಮುನಿಯಪ್ಪ ಅವರು ಆಗಿದ್ದಾರೆ. ಇದು ತಪ್ಪು ಆದ್ದರಿಂದ ಕೂಡಲೇ ಸಚಿವ ಸಂಪುಟದಲ್ಲಿ ಕೆ.ಎಚ್.ಮುನಿಯಪ್ ಪಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಲು ಹೈಕಮಾಂಡ್ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳುವುದರ ಮೂಲಕ ಸರಕಾರಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ. ಈಗಾಗಲೇ ನಮ್ಮ ಸಮುದಾಯದ ಅನೇಕರು ಮಾದ್ಯಮಗಳ ಮೂಲಕ ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಒತ್ತಾಯಿಸಲಾದರೂ ಸಹ ಅವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಸರಕಾರ ಎಡವಿದೆ. ಕೂಡಲೇ ಬದಲಾವಣೆಯಾಗಬೇಕು. ಮುಂದಿನ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೆ.ಎಚ್.ಮುನಿಯಪ್ಪ ಅವರು ಆಗಬೇಕು ಎಂದು ಆಗ್ರಹಿಸಿದರು.
ಚಿತ್ರ: ವೇಣುಗೋಪಾಲ್ ಭಾವಚಿತ್ರ.