ಬೀದರ್ ರೈಲು ನಿಲ್ದಾಣದಲ್ಲಿ ರೋಟರಿ ಕ್ಲಬ್ ಜಲ ಸೇವೆ ಆರಂಭಿಸಿದೇ
ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಬೀದರ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಂಪಾದ ಶುದ್ಧ ಕುಡಿಯುವ ನೀರನ್ನು ವಿತರಿಸುವ ಜಲ ಸೇವೆಯನ್ನು ಆರಂಭಿಸಿದೆ. ನಗರ ರೈಲು ನಿಲ್ದಾಣದಲ್ಲಿ ನಿತ್ಯ ಮಧ್ಯಾಹ್ನ 12ರಿಂದ 1.30ರವರೆಗೆ ಕ್ಲಬ್ ಪದಾಧಿಕಾರಿಗಳು ಈ ಸೇವೆಯನ್ನು ನಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ಪ್ರಯಾಣಿಕರ ಬಾಯಾರಿಕೆಯನ್ನು ತಗ್ಗಿಸಲು ಒಂದು ವಾರದಿಂದ ಜಲ ಸೇವೆ ಆರಂಭವಾಗಿದ್ದು, ಸರಾಸರಿ ಪ್ರತಿದಿನ 25 ಕ್ಯಾನ್ ನೀರು ವಿತರಿಸಲಾಗುತ್ತಿದೆ. ಜಲ ಸೇವೆ ಬೇಸಿಗೆ ಮುಗಿಯುವವರೆಗೆ ಮುಂದುವರಿಯಲಿದೆ ಎಂದು ರೋಟರಿ ಕ್ಲಬ್ ಪದಾಧಿಕಾರಿಗಳು ತಿಳಿಸಿದ್ದಾರೆ.
ರೈಲು ಪ್ರಯಾಣಿಕರಿಗೆ ಈ ಸೇವೆಯಿಂದ ಅನುಕೂಲವಾಗುತ್ತಿದೆ. ತಿರುಪತಿ, ಕಲಬುರಗಿ, ಪುಣೆ, ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧ ಕಡೆ ಪ್ರಯಾಣಿಸುತ್ತಿರುವ ಪ್ರಯಾಣಿಕರು ಜಲ ಸೇವೆಯ ಸದುಪಯೋಗ ಪಡೆಯುತ್ತಿದ್ದಾರೆ. ಜಲ ಸೇವೆಯ ಉಸ್ತುವಾರಿಯನ್ನು ನಿತಿನ್ ಕರ್ಪೂರ, ಕ್ಲಬ್ ಅಧ್ಯಕ್ಷ ನಾಗೇಶ ಪಾಟೀಲ, ಕಾರ್ಯದರ್ಶಿ ರಾಜಕುಮಾರ ಅಳ್ಳೆ ನಡೆಸುತ್ತಿದ್ದಾರೆ. ಸದಸ್ಯರಾದ ಡಾ. ನಿತೇಶಕುಮಾರ ಬಿರಾದಾರ, ಸತೀಶ್ ಸ್ವಾಮಿ, ಬಸವರಾಜ ಮಡಕಿ, ರಾಹುಲ್ ಅಟ್ಟಲ್, ಸುಧೀಂದ್ರ ಸಿಂದೋಲ್ ಮತ್ತಿತರರು ಸಹ ಸೇವೆಗೆ ಸಹಕರಿಸುತ್ತಿದ್ದಾರೆ.