ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ಮಾಣಿಕೇಶ್ ಪಾಟೀಲ
ಬೀದರ್: ಗ್ರಾಮಗಳು ಉದ್ಧಾರವಾಗಬೇಕು ಎಂಬ ಉದ್ದೇಶಕ್ಕಾಗಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಅದನ್ನೇ ಅವಗಣನೆ ಮಾಡಿದರೆ ನೀವೇನು ಗ್ರಾಮೀಣರ ಉದ್ಧಾರ ಮಾಡುತ್ತೀರಿ ಅನೇಕ ಹಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಜನರ ಅನೇಕ ಸಮಸ್ಯೆ ಗಳು ಇರುತ್ತವೆ. ಅದು ಅಲ್ಲದೆ, 2-3 ಗ್ರಾಮ ಪಂಚಾಯಿತಿಗಳಿಗೆ ಒಬ್ಬರೇ ಆಡಳಿತ ಅಧಿಕಾರಿ ಆಗಿ ನೇಮಿಸಿದ್ದೀರಿ. ಹೀಗಾಗಿ ಆಡಳಿತಯಂತ್ರ ಕುಂಠಿತ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಉದಾಸೀನ ಮಾಡುವ ಮೂಲಕ ಸರಕಾರ ಗ್ರಾಮೀಣ ಆಭಿವೃದ್ಧಿಗೆ ಅಡ್ಡಗಾಲಾಗುತ್ತಿದೆ,'' ಎಂದು ಸಾಮಾಜಿಕ ಹೋರಾಟಗಾರ ಮಾಣಿಕೇಶ್ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.'ಗ್ರಾಪಂ ಸದಸ್ಯರ ಅವಧಿ ಮುಗಿದು 5 ತಿಂಗಳು ಕಳೆದಿದೆ. ತಾಪಂ, ಜಿಪಂ ಸದಸ್ಯರ ಅವಧಿ ಮುಗಿದು 6 ವರ್ಷಗಳೇ ಗತಿಸಿವೆ. ಆಗಲೇ ಚುನಾವಣೆ ನಡೆದಿದ್ದರೆ ಮತ್ತೊಂದು ಅವಧಿಯ ಅಧಿಕಾರ ಮುಗಿದು ಒಂದು ವರ್ಷ ಕಳೆಯುತ್ತಿತ್ತು. ಅಂಥದ್ದರಲ್ಲಿ ಇಷ್ಟು ಸುದೀರ್ಘ ಅವಧಿ ವಿಳಂಬ ಮಾಡಿ ಇನ್ನೂ ಈ ವರ್ಷದ ಡಿಸೆಂಬರ್ ನಲ್ಲಿ ಚುನಾವಣೆ ನಡೆಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ಹೇಳುತ್ತಿರುವುದು ಅವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ," ಎಂದು ಕಿಡಿ ಕಾರಿದರು.“ಒಂದು ಎಂಎಲ್ಎ, ಎಂಪಿ ಹುದ್ದೆ ಖಾಲಿಯಾದರೆ ಆರೇ ತಿಂಗಳಲ್ಲಿ ಉಪಚುನಾವಣೆ ಮಾಡಲಾಗುತ್ತದೆ. ಆದರೆ ಸ್ಥಳೀಯ ಚುನಾವಣೆಗಳ ಬಗ್ಗೆ ಮಾತ್ರ ಇಷ್ಟೊಂದು ದಿವ್ಯ ನಿರ್ಲಕ್ಷ್ಯವೇಕೆ? ದೇಶದ ಪ್ರಗತಿ ಹೊಂದಬೇಕಾದರೆ ಮೊದಲು ಗ್ರಾಮಗಳು ಉದ್ಧಾರವಾಗಬೇಕು ಎಂಬ ಉದ್ದೇಶಕ್ಕಾಗಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಅದನ್ನೇ ಅವಗಣನೆ ಮಾಡಿದರೆ ನೀವೇನು ಗ್ರಾಮೀಣರ ಉದ್ದಾರ ಮಾಡುತ್ತೀರಿ,'' ಎಂದು ಸರಕಾರದ ವಿರುದ್ಧ ಹರಿಹಾಯ್ದರು. "ಚುನಾವಣಾ ಆಯೋಗ ಕೂಡ ಇಂಥ ವಿಷಯದಲ್ಲಿ ಸರಕಾರದ ಕೈಗೊಂಬೆಯಂತಾಗಿದೆ. ಬೇಗನೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಸ್ತು ಅನ್ನದಿದ್ದರೆ ಈ ಭಾಗದ ಎಲ್ಲ ಗ್ರಾಪಂ, ತಾಪಂ, ಜಿಪಂ ಮಾಜಿ ಸದಸ್ಯರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ,'' ಎಂದು ಎಚ್ಚರಿಸಿದರು